ಜಾಣ ಕಾಗೆ
A free resource from
KidsOut - the fun and happiness charity
This story is available in:
This story is available in:
ಇಂದಿರಾ ನಾಡಿಗ್ ಅವರ ಕನ್ನಡ ಕಥೆ
ಒಂದಾನೊಂದು ಕಾಲದಲ್ಲಿ ಬೀಪು ಎನ್ನುವ ಕಾಗೆ ಸಿರಿ ಎನ್ನುವ ಚಿಕ್ಕ ಹಳ್ಳಿಯಲ್ಲಿ ವಾಸಿಸುತ್ತಿತ್ತು. ಅದು ಚಳಿಗಾಲವಾಗಿದ್ದು ಕೊರೆಯುವಂತಹ ಚಳಿ ಇತ್ತು ಮತ್ತು ಆದ್ದರಿಂದ ಬೀಪು ಹಳ್ಳಿಯ ಹತ್ತಿರದ ಮರದ ಕೊಂಬೆಯ ಮೇಲೆ ವಿಶ್ರಾಂತಿಯನ್ನು ಪಡೆಯುತ್ತಿತ್ತು.
ಇದೇ ಮರಕ್ಕೆ ಹತ್ತಿರದಲ್ಲಿಯೇ ಇರುವ ಇನ್ನೊಂದು ಮರದ ಮೇಲೆ ಬಹಳ ವಯಸ್ಸಾಗಿರುವ ರಾಣಿ ಎನ್ನುವ ಕಾಗೆ ಕುಳಿತಿತ್ತು. ಚಳಿಯಿಂದಾಗಿ ರಾಣಿ ಕಾಗೆಯು ನಡಗುತ್ತಿತ್ತು ಮತ್ತು ಇಂತಹ ಚಳಿಯ ವಾತಾವರಣದಲ್ಲಿ ದೂರ ಹಾರುವ ಬಲವನ್ನೂ ಅದು ಹೊಂದಿರಲಿಲ್ಲ. ರಾಣಿಯಿರುವ ಮರದ ಕೆಳಗಡೆಯೇ ನಾಲ್ಕು ಜನ ಮನುಷ್ಯರು ಉಣ್ಣೆಯ ಬ್ಲಾಂಕೆಟ್ ಹೊದ್ದು, ಮಧ್ಯದಲ್ಲಿ ಬೆಂಕಿಯನ್ನು ಹಾಕಿಕೊಂಡು ಸುತ್ತಲೂ ಕುಳಿತಿದ್ದರು. ಅವರು ಹರಟುತ್ತಾ ಬ್ರೆಡ್ ಹಾಗೂ ಚಹಾವನ್ನು ಸವಿಯುತ್ತಿದ್ದರು.
ರಾಣಿಗೆ ಬೆಂಕಿಯ ಬೆಚ್ಚಗಿನ ಹತ್ತಿರಕ್ಕೆ ಹೋಗುವ ಆಸೆಯನ್ನು ತಡೆಯಲಾಗಲಿಲ್ಲ ಮತ್ತು ಬೆಂಕಿಯ ಹತ್ತಿರ ಹೋಗಿ ಬೆಚ್ಚಗೆ ಮಾಡಿಕೊಳ್ಳಬೇಕೆಂದು ಹತ್ತಿರ ನುಸುಳತೊಡಗಿತು. ಆದರೆ ಅಲ್ಲಿದ್ದ ಮನುಷ್ಯರಿಗೆ ರಾಣಿಯು ಅವರ ಬ್ರೆಡ್ ಅನ್ನು ತಿನ್ನಲು ಬಂದಿದೆ ಎಂದೆನಿಸಿತು ಮತ್ತು ರಾಣಿಯನ್ನು ‘ಶೂ ... ಶೂ ... ಎಂದು ಹೊರಗಟ್ಟಲು ನೋಡಿದರು.’ ರಾಣಿಯು ಅವರನ್ನು ಬೇಡಿಕೊಳ್ಳಲು ಯತ್ನಿಸಿತು, ‘ನನಗೆ ಬೇಕಿರುವುದು ಬೆಂಕಿಯ ಶಾಖ ಮಾತ್ರ, ನಿಮ್ಮ ಬ್ರೆಡ್ ನಮಗೆ ಬೇಕಿಲ್ಲ ... ದಯವಿಟ್ಟು ಓಡಿಸಬೇಡಿ ...’ ಎಂದು ಅಂಗಲಾಚಿತು. ಆದರೆ ರಾಣಿ ಕಾಗೆಗೆ ಬೆಂಕಿಯ ಹತ್ತಿರ ಬರಲು ಮನುಷ್ಯರು ಬಿಡಲಿಲ್ಲ.
ಬೀಪು ತಾನಿದ್ದ ಮರದಿಂದಲೇ ಇದನ್ನು ನೋಡುತ್ತಿತ್ತು ಮತ್ತು ರಾಣಿಯ ಬಗ್ಗೆ ಅನುಕಂಪ ಮೂಡಿತು, ಆಕೆಗೆ ಸಹಾಯ ಮಾಡಬೇಕು ಎಂದು ಕೂಡ ಬೀಪುವಿಗೆ ಅನ್ನಿಸಿತು. ಬೀಪು ತಾವೇ ಬೆಂಕಿಯನ್ನು ಮಾಡಬೇಕು ಎಂದು ಯೋಚಿಸಿತಾದರೂ ಬೆಂಕಿ ಹಾಕುವುದು ಹೇಗೆನ್ನುವುದು ಕಾಗೆಗಳಿಗೆ ತಿಳಿದಿರಲಿಲ್ಲ. ಆತ ತನ್ನ ಸ್ನೇಹಿತರ ಸಹಾಯ ಪಡೆಯಬೇಕೆಂದು ಯೋಚಿಸಿದ.
ಬೀಪು ತನ್ನ ಗೆಳೆಯರನ್ನೂ ಕಾವ್ ಕಾವ್ ಎಂದು ದೊಡ್ಡದಾಗಿ ಶಬ್ದ ಮಾಡುತ್ತ ಕರೆದನು ಮತ್ತು ಆತನ ಸ್ನೇಹಿತ ಕಾಗೆಗಳು ಅಲ್ಲಿ ಒಟ್ಟು ಸೇರಿದವು. ಬೀಪು ಅವರಿಗೆ ಬೆಂಕಿ ಹಾಕುವುದು ಹೇಗೆ ಎಂದು ಯೋಚಿಸಲು ಹೇಳಿದನು. ಗುಂಪಿನಲ್ಲಿದ್ದ ಒಂದು ಚಿಕ್ಕ ಕಾಗೆ ಉತ್ತಮ ಉಪಾಯವೊಂದನ್ನು ತಿಳಿಸಿತು. ಅದು ಪ್ರತಿಯೊಂದು ಕಾಗೆಗೂ ಸ್ವಲ್ಪವೇ ಕಸ ಕಡ್ಡಿಗಳನ್ನು ಹೊತ್ತು ತರುವಂತೆ ತಿಳಿಸಿತು. ಕೆಲವೇ ಸಮಯದಲ್ಲಿ ಕಾಗೆಗಳು ಸಾಕಷ್ಟು ಪ್ರಮಾಣದಲ್ಲಿ ಕಸ ಕಡ್ಡಿಗಳನ್ನು ಒಟ್ಟು ಸೇರಿಸಿದವು.
ಆದರೆ ಅವರು ಈ ಕಸಕಡ್ಡಿಗಳಿಗೆ ಬೆಂಕಿ ಹೊತ್ತಿಸಬೇಕಿತ್ತು. ಬೀಪು ಮತ್ತು ಕೆಲವು ಕಾಗೆಗಳು ಕಲ್ಲುಗಳನ್ನು ತಂದು ಅವನ್ನು ಉಜ್ಜತೊಡಗಿದರು ಮತ್ತು ಬೆಂಕಿ ಹೊತ್ತಿಕೊಳ್ಳುವಂತೆ ಮಾಡಲು ಯತ್ನಿಸಿದರು. ಅವರು ಕಸಕಡ್ಡಿಗಳ ರಾಶಿಯ ಮೇಲೆ ಕುಳಿತು ಕಲ್ಲು ಉಜ್ಜುವುದನ್ನು ಮುಂದುವರಿಸಿದರು. ಹುರ್ರೆ ... ಕೆಲವೇ ಸಮಯದಲ್ಲಿ ಬೆಂಕಿ ಹೊತ್ತಿಕೊಂಡಿತು. ಈಗ ಕಾಗೆಗಳೆಲ್ಲ ಬೆಚ್ಚಗೆ ಮಾಡಿಕೊಳ್ಳುವಂತಾಯಿತು! ಕಾಗೆಗಳಿಗೆ ಸಂತೋಷವೆನಿಸಿತು. ಬೆಂಕಿಯ ಹತ್ತಿರ ಕುಳಿತ ರಾಣಿಗೆ ಆರಾಮವೆನಿಸಿತು ಮತ್ತು ಆಕೆ ಬೀಪು ಮತ್ತು ಸ್ನೇಹಿತರಿಗೆ ಧನ್ಯವಾದ ಹೇಳಿತು.
ಹಾಗಾಗಿ ಉಪಾಯಗಳು ಮತ್ತು ತಂಡಪ್ರಯತ್ನವು ಕಾಗೆಗಳನ್ನು ಬೆಚ್ಚಗೆ ಮತ್ತು ಸಂತೋಷ ಪಡುವಂತೆ ಮಾಡಿತು ...
Enjoyed this story?